'ಗಗನ'ವೇ ಬಾಗಿ 

' ನೀನೊಬ್ಬ ಆಕ್ಟರ್ರಾ, ಸಿಂಗರ್ರಾ, ಕವಿಯಾ ಅಥವಾ ಭಾಷಣಕಾರನಾ? ಯಾರು ನೀನು? ಪುಟ್ಟ ಬಾಲಕನಲ್ಲಿ ಇವೆಲ್ಲಾ ಒಟ್ಟೊಟ್ಟಿಗೆ ಹೇಗೆ ಸಾಧ್ಯ? ಬಹುಷ: ಅತಿಮಾನುಷ ಶಕ್ತಿ ನಿನ್ನಲ್ಲಿರಬಹುದೇನೋ...’ ಎಂದು ಸ.ರಿ.ಗ.ಮ.ಪ ಲಿಟ್ಲ್ ಚಾಂಫ್ಸ್ ಪೈನಲ್‌ವೇದಿಕೆಯಲ್ಲಿ ನೆರೆದಿದ್ದ ಸಾವಿರರು ಪ್ರೇಕ್ಷಕರ ಮುಂದೆ ಖ್ಯಾತ ಬಹುಭಾಷಾ ಹಿನ್ನಲೆ ಗಾಯಕಿ ಉಷಾ ಉತ್ತುಪ್ ಅವರು ಹರಸುತ್ತಿರುವಾಗ ವಿಧಯನಾಗಿ ಕಾಲಿಗೆರಗಿ ’ಆಶೀರ್ವದಿಸಿ ಮೇಡಂ’ ಎಂದು ಪುಟ್ಟ ಹುಡುಗನೊಬ್ಬ ಕೇಳಿಕೊಳ್ಳುತ್ತಿದ್ದ. ಅಂದ ಹಾಗೆ ಈ ಪುಟ್ಟ ಪೋರನ ಹೆಸರು ಗಗನ್ ಗಾಂವ್ಕರ್.

ಹೌದು, ಈತನಿಗಿಂದು ರಾಜ್ಯಾದ್ಯಂತ ಪ್ಯಾನ್. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಈತನನ್ನು ಇಷ್ಟ ಪಡುವವರೇ ಇದಕ್ಕೆ ಕಾರಣ ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಲಿಟ್ಲ್ ಚಾಂಫ್ಸ್ ಸೀಸನ್-೯ರಲ್ಲಿ ಈತ ಮಾಡಿದ ಮೋಡಿ.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಸಮೀಪದ ಡಾ.ಗೋಪಾಲಕೃಷ್ಣ ಎಂ. ಗಾಂವ್ಕರ್ ಮತ್ತು ಗಿರಿಜಾ ಗಾಂವ್ಕರ್ ಅವರ ಪುತ್ರನಾದ ಗಗನ್‌ಗೆ ಸಂಗೀತದತ್ತ ಬಾಲ್ಯದಲ್ಲೇ ಒಲವು. ಟಿ.ವಿ ಯಲ್ಲಿ ಪ್ರಸಾರವಾಗುತ್ತಿದ್ದ ಹಾಡಿಗೆ ಗುನುಗುತ್ತಿದ್ದ ಈತನ ಸಂಗೀತಾಭಿರುಚಿಯನ್ನು ಗಮನಿಸಿ ಪೋಷಕರು ಒಂದನೇ ತರಗತಿಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು  ಕಲಿಯಲು ಮುಕುಂದ ಕೃಪಾ ಸಂಗೀತ ಶಾಲೆಯ ವಿದ್ವಾನ್ ಶ್ರೀ ಮಹಾಬಲೇಶ್ವರ ಭಾಗವತ್‌ರಲ್ಲಿ ಸೇರಿಸಿದರು.
ಗಗನ್‌ನ ಸಂಗೀತ ಪಯಣಕ್ಕೆ ದೊಡ್ಡ ತಿರುವು ನೀಡಿದ್ದು ಸರಿಗಮಪ ಲಿಟ್ಲ್ ಚಾಂಫ್ಸ್ ಷೋ. ಮೊದಲನೇ ಬಾರಿ ಮಂಗಳೂರಿನಲ್ಲಿ ನಡೆದ ಆಯ್ಕೆಯ ಹಂತದಲ್ಲೇ ತನ್ನ ಕಮಾಲ್ ಪ್ರದರ್ಶಿಸಿದ ಈತ ಕರ್ನಾಟಕದ ಸುಮಾರು ಆರು ಸಾವಿರ ಮಂದಿ ಸ್ಪರ್ದಿಗಳ ಪೈಕಿ ಟಾಪ್ ೧೭ ಕ್ಕೆ ಆಯ್ಕೆಯಾದನಲ್ಲದೆ ಅತೀ ಹೆಚ್ಚು ಅಂಕ ದಕ್ಕಿಸಿದ. ಇಲ್ಲಿಂದ ಈತ ಹಿಂತಿರುಗಿ ನೋಡಿದವನೇ ಅಲ್ಲ. ನೋಡು ನೋಡುತ್ತಲೇ ಪೈನಲ್ ವೇದಿಕೆ ಏರಿ ಪ್ರಥಮ ಸ್ಥಾನ ದಕ್ಕಿಸಿದ.
ಈ ಷೋದಲ್ಲಿ ’ಅಶ್ವಮೇಧಾ’ ಎಂಬ ಹಾಡನ್ನು ಈತ ಹಾಡುತ್ತಿದ್ದರೆ ಕರ್ನಾಟಕದ ಉಪಮುಖ್ಯಮಂತ್ರಿ ಅಶೋಕ್ ಅವರು ಬಾಲಕನ ಅಪ್ರತಿಮ ಪ್ರತಿಭೆಗೆ ತಲೆದೂಗಿ, ’ನಿನ್ನ ಈ ಹಾಡು ಯಾವತ್ತೂ ನನ್ನೊಳಗೆ ಶಾಶ್ವತ ಚಿತ್ರವಾಗಿದೆ... ಫೆಂಟಾಸ್ಟಿಕ್!’ ಎಂದು ಉದ್ಘರಿಸಿದರು. ಅಷ್ಟೇ ಏಕೆ ’ಜಯ್ ಹೋ’ ಖ್ಯಾತಿಯ ಗಾಯಕ ಶ್ರೀ ವಿಜಯ ಪ್ರಕಾಶ್ ರವರು ತೀರ್ಪುಗಾರರಾಗಿ ಬಂದವರು ಅವನ ಮೇಲೆ ಹಾಡು ಕಟ್ಟಿ ಹೊಗಳಿದರು. ಇನ್ನೊಬ್ಬ ತೀರ್ಪುಗಾರ್ತಿಯಾದ ಗಾಯ ಸೌಮ್ಯ ರಾವ್ ರವರಂತೂ ಇವನ ಹಾಡು ಕೇಳಿದ ಮೊದಲ ದಿನವೇ ’ಜ್ಯೂನಿಯರ್ ಶಂಕರ್ ಮಹದೇವನ್’ ಎಂದು ನಾಮಕರಣ ಮಾಡಿಯೇ ಬಿಟ್ಟರು.
ರಂಗಭೂಮಿಯತ್ತಲೂ ಈತನಿಗೆ ಒಲವು. ರಂಗಭೂಮಿ(ರಿ) ಉಡುಪಿಯಿಂದ ಶ್ರೀ ರವಿರಾಜ್ ನಿರ್ದೇಶಿಸಿರುವ ನಾಟಕ ’ನಿದ್ರಾನಗರಿ’ ಮತ್ತು ’ನೀಲಿ ಕುದುರೆ’ಯಲ್ಲಿ ಅಭಿನಯಿಸಿದನಲ್ಲದೆ ರಥಬೀದಿ ಗೆಳೆಯರು (ರಿ) ಆಶ್ರಯದಲ್ಲಿ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಮೂಡಿಬಂದ ’ಪುಷ್ಪರಾಣಿ’ ಎಂಬ ನಾಟಕದಲ್ಲೂ ಮನೋಜ್ಞ ಅಭಿನಯ ಈತನಿಂದ ಮೂಡಿದೆ.
ಚಲನಚಿತ್ರದತ್ತಲೂ ಮಿಂದೆದ್ದ ಈತ ಈಗಾಗಲೇ ವೇಮಗಲ್ ಜಗನ್ನಾಥ ನಿರ್ದೇಶಿಸಿ ’ನೂರೊಂದು ಬಾಗಿಲು’ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದ್ದಾನೆ. ಅಲ್ಲದೆ ಕಳೆದ ವಾರ ಬಿಡುಗಡೆಯಾದ ’ಸತ್ಯಾದಿಗೆದ ಮಣ್ಣ್’ ಎಂಬ ತುಳು ಟೆಲಿಫಿಲ್ಮಿ ನಲ್ಲಿ ಮಿಂಚಿರುವನು.
ತಬಲದ ಆಸಕ್ತಿ ಗಗನ್‌ಗೆ ಬಾಲ್ಯದಲ್ಲೇ ಇತ್ತು. ಮನೆಯಲ್ಲಿದ್ದ ಪ್ಲೇಟ್‌ಗಳನ್ನು ತನ್ನ ಪ್ರಾಥಮಿಕ ತಬಲದಂತೆ ಬಾರಿಸುತ್ತಿದ್ದ ಈತನ ಆಸಕ್ತಿಗೆ ನೀರೆರೆದು ಪೋಷಿಸಿದವರು ಈತನ ಪೋಷಕರು. ಹಾರ್ಮೋನಿಯಂ ಕೂಡಾ ಈತನಿಗೆ ಸಲೀಸು. ಇದನ್ನು ನುಡಿಸುತ್ತ ನಿರರ್ಗಳವಾಗಿ ರಾಗಗಳಲ್ಲಿ ಆಲಾಪದ ಜೊತೆ ಅರ್ಧಗಂಟೆಗಿಂತಲೂ ಹೆಚ್ಚು ಕಾಲ ಸತತವಾಗಿ ಹಾಡಬಲ್ಲ ಪ್ರತಿಭೆ ಈತ. ಸಂಗೀತದ ಶೃತಿಯ ವಿಚಾರದಲ್ಲಿ ಚಂದ್ರಶೇಖರ ಕೆದಿಲಾಯರನ್ನು ನೆನೆಯುವ ಗಗನ್‌ಗೆ ಭೀಮ್‌ಸೇನ್ ಜೋಷಿ ಅವರು ರೋಲ್ ಮಾಡೆಲ್ ಅಂತೆ.
ಇಷ್ಟಲ್ಲದೆ ಕೇರಳ ಸರ್ಕಾರದ ಐ.ಜಿ.ಎಸ್.ಸಿ. ಆಯೋಜಿಸಿದ ಕ್ವಿಜ್‌ನಲ್ಲಿ ಪದಕದ ವಿಜೇತ. ಏಕಪಾತ್ರಾಭಿನಯದಲ್ಲಿಯೂ ಸನಮಾಗಿ ತೊಡಗಿಸಿರುವ ಗಗನ್ ಪೌರಾಣಿಕ ಪಾರ್ಥ ಸೇರಿದಂತೆ ಸಿನಿಮಾ ನಟರ ಹಾವಭಾವದ ನಟನೆಯಲ್ಲಿ ಫೇಮಸ್.
ಕಲಾಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧಿಸಿರುವ ಗಗನ್‌ಗೆ ಸ.ರಿ.ಗ.ಮ.ಪ ಪ್ರಥಮ ಸ್ಥಾನದ ಪದಕ, ಗಾನಕೋಗಿಲೆ ಬಿರುದು ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿದೆ.
ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಕಲಿಯುತ್ತಿರುವ ಗಗನ್‌ಗೆ ಶಾಲಾ ಮಟ್ಟದ ಪ್ರೋತ್ಸಾಹವೂ ಈ ಮಟ್ಟಿನ ಯಶಸ್ಸಿಗೆ ಕಾರಣವಂತೆ.
                                                             ಇತೀ ತಮ್ಮ ವಿಶ್ವಾಸಿ;
                                                            ನವೀನ್ ಭಟ್,ಇಳಂತಿಲ
                                                            ತೃತೀಯ ಪತ್ರಿಕೋದ್ಯಮ ವಿಭಾಗ
                                                          ವಿವೇಕಾನಂದ ಕಾಲೇಜು ಪುತ್ತೂರು                                                                                                          ಮೊಬೈಲ್: ೯೮೪೪೬೩೮೫೪೫

Comments

Popular posts from this blog